ಖಿನ್ನತೆ

ಖಿನ್ನತೆಯಿಂದ…. ಆಳವಾದ ಸಂತೃಪ್ತಿಗೆ

ಜೀವನವು ಒಂದು ಯುದ್ಧ. ವೈದ್ಯರು ರೋಗಗಳ ವಿರುದ್ಧ ಹೋರಾಡುತ್ತಿದ್ದಾರೆ. ನ್ಯಾಯವಾದಿಗಳು ಅನ್ಯಾಯದ ವಿರುದ್ಧ ಹೋರಾಡುತ್ತಾರೆ. ಶಿಕ್ಷಕರು ಅಜ್ಞಾನದ ವಿರುದ್ಧ ಹೋರಾಡುತ್ತಿದ್ದಾರೆ. ನೀವು ಹೋರಾಡುವ ಇಚ್ಛೆಯನ್ನು ಕಳೆದುಕೊಂಡಾಗ ಖಿನ್ನತೆಯು ಉಂಟಾಗುತ್ತದೆ. ಅರ್ಜುನನು ಖಿನ್ನತೆಗೆ ಒಳಗಾದ ಕಾರಣ, ಅವನು ಯುದ್ಧ ಮಾಡುವ ಇಚ್ಛೆಯನ್ನು ಕಳೆದುಕೊಂಡನು. ಬಿಲ್ಲು ಅವನ ಕೈಗಳಿಂದ ಕೆಳಗೆ ಬಿದ್ದು,ಅವನ ಬೆರಳುಗಳು ನಡುಗಲು ಪ್ರಾರಂಭಿಸಿದವು. ಎಚ್ಚೆತ್ತುಕೊಂಡು ಹೋರಾಟ ಮಾಡುವಂತೆ ಕೃಷ್ಣನು ಅವನನ್ನು ಪ್ರಚೋದಿಸಿದನು. ಅರ್ಜುನನಂತೆಯೇ, ‘ನಾನು ಹೋರಾಟ ಮಾಡುತ್ತೇನೆ’ಎನ್ನುವ ನಿರ್ಧಾರವನ್ನು ನೀವು ತೆಗೆದುಕೊಂಡರೆ, ಈ ನಿಮ್ಮ ನಿರ್ಧಾರವೇ, ನಿಮ್ಮ ಖಿನ್ನತೆಯನ್ನು ಹೊಡೆದೋಡಿಸಬಲ್ಲುದು. ನೀವು ಸುದರ್ಶನ ಕ್ರಿಯೆ ಮತ್ತು ಧ್ಯಾನವನ್ನು ಮಾಡಿದಾಗ , ನಿಮ್ಮನ್ನು ಕಾಡುತ್ತಿದ್ದ ಹಾಗೂ ನಿಮ್ಮ ದುಃಖಕ್ಕೆ ಕಾರಣವಾಗಿದ್ದ ಹಿಂದಿನ ಎಲ್ಲಾ ಗಾಯಗಳು ಕ್ಷಣಾರ್ಧದಲ್ಲಿ ಮಾಯವಾಗಿ ಹೋಗುತ್ತವೆ.

ಖಿನ್ನತೆಯಿಂದ ಹೊರಗೆ ಬರುವುದು ಹೇಗೆ?

icon

ಜವಾಬ್ದಾರಿಯನ್ನು ತೆಗೆದುಕೊಳ್ಳಿ

ಆರ್ಥಿಕವಾಗಿ ಉಂಟಾದ ವಿಷಮ ಪರಿಸ್ಥಿತಿಯ ಬಿಕ್ಕಟ್ಟಿಗಿಂತಲೂ ಮಾನಸಿಕ ಖಿನ್ನತೆಯು ಅತ್ಯಂತ ಕೆಟ್ಟದಾಗಿದೆ. ಇದನ್ನು ದಾಟಿ ಹೋಗಬೇಕಾದರೆ ತಮ್ಮ ಸುತ್ತಲಿನ ಜನರಿಗೆ ಸಹಾಯ ಮಾಡುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ಆದುದರಿಂದ, ಖಿನ್ನತೆಯುಂಟಾದಾಗ, ಇದು ನಮ್ಮ ಕರ್ಮದ ಪರಿಣಾಮ ,ಎಂದು ಭಾವಿಸಿ ನಿಷ್ಕ್ರಿಯವಾಗಿ ಇದ್ದುಬಿಡಬೇಡಿ. ನೀವು ಖಂಡಿತವಾಗಿಯೂ ಅದರ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಂಡು ಏನನ್ನಾದರೂ ಮಾಡಲು ಸಾಧ್ಯವಿದೆ.

icon

ನಿಮ್ಮ ಜೀವನವು ಅತ್ಯಂತ ಅಮೂಲ್ಯ ಎನ್ನುವುದನ್ನು ಸ್ಮರಿಸಿಕೊಳ್ಳಿ

ನಿಮ್ಮ ಜೀವನವು ತುಂಬಾ ಅಮೂಲ್ಯವಾಗಿದೆ. ಅದನ್ನು ವ್ಯರ್ಥವಾಗಿ ಕಳೆದುಕೊಳ್ಳಬೇಡಿ. ನೀವು ಧ್ಯಾನ ಮಾಡುವಾಗ, ನಿಮ್ಮನ್ನು ಕಾಡುತ್ತಿರುವ ಮತ್ತು ನಿಮ್ಮ ಜೀವನವನ್ನು ದುಃಖಕರವಾಗಿಸಿದ ಎಲ್ಲಾ ಹಿಂದಿನ ಗಾಯಗಳು ಕೆಲವೇ ಸಮಯದಲ್ಲಿ ಮಾಯವಾಗಿ ಬಿಡುತ್ತವೆ. ಪ್ರಪಂಚದ ಎಲ್ಲಕ್ಕಿಂತಲೂ ಹೆಚ್ಚಾಗಿ ನೀವು ನಿಮ್ಮನ್ನು ಗೌರವಿಸಿಕೊಳ್ಳಬೇಕು. ಏಕೆಂದರೆ ನಿಮ್ಮ ಇಡೀ ಪ್ರಪಂಚದಲ್ಲಿ ನೀವೇ ನಿಮ್ಮ ಕೇಂದ್ರ ಬಿಂದುವಾಗಿದ್ದೀರಿ.

icon

ನೀವು ಸುಮ್ಮನೆ ಯೋಚನೆ ಮಾಡಿಕೊಂಡು ಚಿಂತಿಸುತ್ತಾ ಕುಳಿತುಕೊಳ್ಳಬೇಡಿ

ಆದ್ದರಿಂದ ಬರೀ ಸುಮ್ಮನೆ ಕುಳಿತುಕೊಂಡು ನಿಮ್ಮ ಬಗ್ಗೆಯೇ ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿಬಿಡಬೇಡಿ. 'ನನಗೆ.. ಏನಾಗುತ್ತದೆ? ಮುಂದೆ ನನಗೆ… ಏನಾಗಬಹುದು?’ಎಂದು ನಿಮ್ಮ ಬಗ್ಗೆಯೇ ನೀವು ಚಿಂತಿಸುತ್ತಾ ಕುಳಿತುಕೊಂಡರೆ, ಖಂಡಿತವಾಗಿಯೂ ನೀವು ಖಿನ್ನತೆಗೆ ಒಳಗಾಗುತ್ತೀರಿ . ನೀವು ಈ ಜಗತ್ತಿನಲ್ಲಿ ಇರುವುದು ಸಮಾಜದಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಲಿಕ್ಕಾಗಿ! ನೀವು ದೇವರ ಕೆಲಸವನ್ನು ಮಾಡಲು ಈ ಜಗತ್ತಿಗೆ ಬಂದಿದ್ದೀರಿ. ಇದನ್ನು ಅರ್ಥಮಾಡಿಕೊಳ್ಳಿ ಮತ್ತು ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ. ಪ್ರತಿನಿತ್ಯವೂ ಸುದರ್ಶನ ಕ್ರಿಯೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ. ಸ್ವಲ್ಪ ಸಮಯದವರೆಗೆ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುತ್ತಿದ್ದಂತೆ, ನಿಮ್ಮಲ್ಲಿ ಎಷ್ಟೊಂದು ಬದಲಾವಣೆಯಾಗುತ್ತದೆ ಎಂಬುದನ್ನು ನೀವೇ ಪ್ರತ್ಯಕ್ಷವಾಗಿ ನಿಮ್ಮ ಅನುಭವದಿಂದಲೇ ಕಂಡುಕೊಳ್ಳಿ!

icon

ಎಚ್ಚೆತ್ತುಕೊಳ್ಳಿ

ನೀವು ಯಾವ ಕಾರಣಕ್ಕಾಗಿ ಖಿನ್ನತೆಗೆ ಒಳಗಾಗಿದ್ದೀರಿ? ಎಚ್ಚೆತ್ತುಕೊಂಡು ನೋಡಿ ಕೊಳ್ಳಿ. ಹೇಗಿದ್ದರೂ, ಒಂದಲ್ಲ ಒಂದು ದಿನ ನಾವೆಲ್ಲರೂ ಸಾಯುತ್ತೇವೆ ಮತ್ತು ನಮ್ಮ ದೇಹವನ್ನು ಇಲ್ಲಿಯೇ ಬಿಡುತ್ತೇವೆ. ಈ ಭೂಮಂಡಲದಲ್ಲಿ ಇರುವಷ್ಟು ಸಮಯವಾದರೂ, ನಾವು ಸಂತೋಷವಾಗಿರಬೇಕಲ್ಲವೇ? ಇರುವಷ್ಟು ದಿನಗಳವರೆಗೆ ನಮ್ಮ ಸುತ್ತಲೂ ಸಂತೋಷವನ್ನು ಹರಡಬೇಕಲ್ಲವೇ? ನಮಗಾಗಿ ಏನನ್ನಾದರೂ ಬಯಸುವ ಬದಲು, ನಾವು ನೀಡುವ ಸ್ಥಾನದಲ್ಲಿದ್ದರೆ ಹೇಗಿರುತ್ತದೆ? ಬೇರೇನೂ ಮಾಡಲಿಕ್ಕಾಗದಿದ್ದರೆ, ನಾವು ಎಲ್ಲರಿಗೂ ಆಶೀರ್ವಾದವನ್ನಾದರೂ ಕೊಡಬಹುದು. ಅಲ್ಲವೇ? ನೀವು ನಿಮ್ಮ ಜೀವನದಲ್ಲಿ ಇತರರಿಗೆ ಒಳ್ಳೆಯದನ್ನು ಮಾಡಬೇಕೆಂದು ನಿರ್ಧರಿಸಿ, ಉತ್ತಮ ತರಂಗಗಳನ್ನು ಹರಡಲು ಪ್ರಾರಂಭಿಸಿದ ಕೂಡಲೇ, ನಿಮ್ಮ ಖಿನ್ನತೆಯು ಕಿಟಕಿಯಿಂದ ಹೊರಗೆ ಹೋಗಿರುತ್ತದೆ.

ಖಿನ್ನತೆ ಮತ್ತು ಶಕ್ತಿ, ಇವುಗಳ ನಡುವೆ ಗುಪ್ತವಾಗಿ ಇರುವ ನಂಟು

ಪ್ರಾಣಶಕ್ತಿಯು ಕಡಿಮೆಯಾದಾಗ ಖಿನ್ನತೆಯು ಉಂಟಾಗುತ್ತದೆ. ನಿಮ್ಮ ಶರೀರ ಮತ್ತು ಮನಸ್ಸುಗಳಲ್ಲಿ ಶಕ್ತಿಯ ಮಾಪನವು ಕಡಿಮೆಯಾದಾಗ ನೀವು ಎಲ್ಲದರಲ್ಲಿಯೂ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ. ಅದು ಮತ್ತಷ್ಟು ಕಡಿಮೆಯಾದಾಗ, ನೀವು ಬದುಕುವ ಇಚ್ಛೆಯನ್ನೇ ಕಳೆದುಕೊಳ್ಳುತ್ತೀರಿ.

ಪ್ರತಿಯೊಂದರಲ್ಲಿಯೂ ಪ್ರಾಣ ಅಥವಾ ಶಕ್ತಿ ಇದ್ದೇ ಇರುತ್ತದೆ. ವಾಸ್ತವವಾಗಿ, ನಾವು ಪ್ರಾಣದ ಸಾಗರದಲ್ಲಿಯೇ ತೇಲಾಡುತ್ತಿದ್ದೇವೆ. ಅದು ನಮ್ಮೊಳಗಿರುವ ಜೀವಶಕ್ತಿಯೇ (ಓಜಸ್ಸು) ಆಗಿದೆ. ಕಲ್ಲುಗಳಲ್ಲಿ ಪ್ರಾಣದ ಒಂದು ಪ್ರಮಾಣವು ಇರುವುದು. ನೀರಿನಲ್ಲಿ ಎರಡು ಪ್ರಮಾಣದ ಪ್ರಾಣವಿರುವುದು. ಅಗ್ನಿಯು ಪ್ರಾಣದ ಮೂರು ಪ್ರಮಾಣಗಳನ್ನು ಹೊಂದಿದೆ. ಗಾಳಿಯಲ್ಲಿ ಪ್ರಾಣದ ನಾಲ್ಕು ಪ್ರಮಾಣಗಳಿವೆ. ಸಸ್ಯಗಳಲ್ಲಿ ಪ್ರಾಣದ ಐದು ಪ್ರಮಾಣಗಳಿವೆ. ಪ್ರಾಣಿಗಳಲ್ಲಿ ಆರು ಪ್ರಮಾಣಗಳಿವೆ. ಮನುಷ್ಯರು ತಮ್ಮಲ್ಲಿ ಏಳರಿಂದ 16 ಪ್ರಮಾಣಗಳಷ್ಟು ಪ್ರಾಣವನ್ನು ಹಿಡಿದಿಟ್ಟುಕೊಳ್ಳಬಲ್ಲರು. ಇಡೀ ವಿಶ್ವವೇ ಪ್ರಾಣದ ಅಭಿವ್ಯಕ್ತತೆಯಾಗಿದೆ.

ಪ್ರಾಣವು ಕಡಿಮೆಯಾದಾಗಲೆಲ್ಲಾ, ನೀವು ಖಿನ್ನತೆಗೆ ಒಳಗಾಗುತ್ತೀರಿ. ಪ್ರಾಣವು ಮತ್ತಷ್ಟು ಕಡಿಮೆಯಾದಾಗ, ನೀವು ಆತ್ಮಹತ್ಯೆ ಮಾಡಿಕೊಳ್ಳಬಯಸುತ್ತೀರಿ. ಪ್ರಾಣವು ಹೆಚ್ಚಾದಾಗ, ನೀವು ಉತ್ಸಾಹದೊಂದಿಗೆ ಲವಲವಿಕೆಯಿಂದ ಇರುತ್ತೀರಿ. ಪ್ರಾಣವು ತುಂಬಾ ಹೆಚ್ಚಿರುವಾಗ, ನೀವು ತುಂಬಾ ಶಕ್ತಿಶಾಲಿಗಳಾಗಿದ್ದು, ಅತ್ಯಾನಂದವನ್ನು ಅನುಭವಿಸುತ್ತೀರಿ. ಆದುದರಿಂದಲೇ ಜನರು ಖಿನ್ನತೆಗೆ ಒಳಗಾದಾಗ, ಕೇವಲ ಸಲಹೆ ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ಆ ಕೂಡಲೇ ನೀವು ಮಾಡಬೇಕಾದುದು ಅವರ ಪ್ರಾಣಶಕ್ತಿಯನ್ನು ಹೆಚ್ಚಿಸುವ ಕೆಲಸ.

ವ್ಯಾಯಾಮ, ಸರಿಯಾದ ಆಹಾರ, ಧ್ಯಾನ, ಉಸಿರಾಟ ಮತ್ತು ಸುದರ್ಶನ ಕ್ರಿಯೆಗಳಿಂದ ನಿಮ್ಮ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಇವುಗಳನ್ನೆಲ್ಲ ಮಾಡುವುದರಿಂದ, ತಕ್ಷಣವೇ ನಿಮ್ಮ ಪ್ರಾಣಶಕ್ತಿಯ ಮಟ್ಟವು ಹೆಚ್ಚಾಗುತ್ತದೆ. ಶಕ್ತಿಯು ಹೆಚ್ಚಾದಾಗ, ಸಹಜವಾಗಿಯೇ ನೀವು ಲವಲವಿಕೆ ಹಾಗೂ ಉತ್ಸಾಹಗಳೊಂದಿಗೆ ಸಂತೋಷವಾಗಿರುತ್ತೀರಿ. ಶಕ್ತಿಯು ಇನ್ನೂ ಪರಿಪೂರ್ಣವಾಗಿ ದೊರೆತಾಗ, ನಿಮಗೆ ಪರಮಾನಂದದ ಅನುಭವವು ದೊರೆಯುವುದು.

ಸಂಬಂಧಪಟ್ಟ ಕಾರ್ಯಕ್ರಮಗಳು

ಖಿನ್ನತೆಯನ್ನು ನಿವಾರಿಸುವಲ್ಲಿ ಧ್ಯಾನವು ಕೀಲಿಕೈಯಾಗಿದೆ.

ಯಾವುದೇ ವಿಧದ ಬದಲಾವಣೆಗಳಿಲ್ಲದೆ ಜೀವನವು ಇದ್ದಂತೆಯೇ ಸ್ಥಿರವಾಗಿರುತ್ತದೆ, ಎನ್ನುವ ತಪ್ಪು ತಿಳುವಳಿಕೆಯು ಖಿನ್ನತೆಯ ಸಂಕೇತವಾಗಿದೆ . ಜೀವನದಲ್ಲಿ ಎಲ್ಲವೂ ಕೊನೆಗೊಂಡಿತು;ಬದುಕು ಸ್ಥಿರವಾಗಿದೆ; ಇದರಲ್ಲಿ ಹೆಚ್ಚಿಗೆ ಇನ್ನೇನೂ ಉಳಿದಿಲ್ಲ ;ಎಲ್ಲಿಗೂ ಹೋಗಲಿಕ್ಕೆ ಕೂಡ ಆಗುವುದಿಲ್ಲ, ಎಂದು ನೀವು ಭಾವಿಸಿದಾಗ, ನೀವು ಖಿನ್ನತೆಗೆ ಒಳಗಾಗುತ್ತೀರಿ. ಹೋರಾಡುವ ಇಚ್ಛೆಯನ್ನು ಕಳೆದುಕೊಂಡಾಗ ಇದು ಸಂಭವಿಸುತ್ತದೆ. ಆಧ್ಯಾತ್ಮಿಕತೆಯು ಧ್ಯಾನ, ಸೇವೆ, ಜ್ಞಾನ ಮತ್ತು ವಿವೇಕಗಳ ಮೂಲಕ ಶರೀರ ಮತ್ತು ಮನಸ್ಸುಗಳಲ್ಲಿ ಚೈತನ್ಯ ಶಕ್ತಿಯನ್ನು ಹೆಚ್ಚಿಸುವ ಕಾರಣ, ಇದು ನಿಮ್ಮನ್ನು ಖಿನ್ನತೆಯಿಂದ ಹೊರಗೆ ಬರಲು ಸಹಾಯ ಮಾಡುತ್ತದೆ.

- ಗುರುದೇವ ಶ್ರೀ ಶ್ರೀ ರವಿಶಂಕರ್

ಆತ್ಮಹತ್ಯಾ ಪ್ರವೃತ್ತಿಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆಯನ್ನು ತೋರಿಸಬಹುದು?

ತನ್ನ ಮೇಲೆಯೇ ಮಾಡಿಕೊಳ್ಳುವ ಹಿಂಸಾಚಾರವು ಮತ್ತೊಬ್ಬರ ಮೇಲೆ ಮಾಡಿದ ಹಿಂಸೆಯಷ್ಟೇ ಕೆಟ್ಟದು. ಹಾಗಾಗಿ ಜಗತ್ತು ಒಂದು ಕಡೆ ಸಾಮಾಜಿಕ ಹಿಂಸೆಯಿಂದ ಮತ್ತು ಇನ್ನೊಂದು ಕಡೆಯಿಂದ ಆತ್ಮಹತ್ಯಾ ಪ್ರವೃತ್ತಿಗಳ ನಡುವೆ ಸಿಲುಕಿಕೊಂಡಿದೆ. ಅಧ್ಯಾತ್ಮ ಮಾತ್ರವೇ ಅವರನ್ನು ಕೇಂದ್ರ(ಸಮತೋಲನ)ಕ್ಕೆ ತಂದು ಈ ಎರಡು ತುತ್ತು ತುದಿಗಳಿಂದ ಮುಕ್ತಗೊಳಿಸಬಲ್ಲುದು.

ನೀವು ಯಾರಲ್ಲಿಯಾದರೂ ಕಿಂಚಿತ್ ಪ್ರಮಾಣದ ಆತ್ಮಹತ್ಯಾ ಪ್ರವೃತ್ತಿಯನ್ನು ಕಂಡರೂ, ಅವರಿಗೆ ವೃತ್ತಿಪರ ವೈದ್ಯಕೀಯ ಸಹಾಯವನ್ನು ಕೊಡಿಸಿ. ಇದರ ಜೊತೆಗೆ ಅವರು ಯಾವುದಾದರೂ ಒಳ್ಳೆಯ ಸಾಂಗತ್ಯದಲ್ಲಿ ಇರುವಂತೆ ಮಾಡಿ, ಅವರನ್ನು ಹಾಡಲು ಮತ್ತು ನರ್ತನ ಮಾಡಲು ಪ್ರೇರೇಪಿಸಿ. ಜೀವನವು ಕೇವಲ ಕೆಲವು ಲೌಕಿಕ ಸ್ಥಾನಗಳನ್ನು ಪಡೆದುಕೊಳ್ಳುವುದಕ್ಕಿಂತ ಎಷ್ಟೋ ಹೆಚ್ಚಿನದು, ಎಂಬುದನ್ನು ಅವರಿಗೆ ಅರ್ಥಮಾಡಿಸಿ.

ಜೀವನವು ಇತರರ ನಿಂದೆ ಮತ್ತು ಪ್ರಶಂಸೆಗಳಿಗಿಂತ ಬಹಳಷ್ಟು ಮೇಲ್ಮಟ್ಟದ್ದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ನಮ್ಮ ಬದುಕು ಕೆಲವು ಲೌಕಿಕ ಸಂಬಂಧಗಳು ಅಥವಾ ಉದ್ಯೋಗಕ್ಕಿಂತ ಎಷ್ಟೋ ಅಮೂಲ್ಯವಾದದ್ದು. ಸಾಮಾನ್ಯವಾಗಿ ಸಂಬಂಧಗಳ ನಡುವಿನ ವೈಫಲ್ಯ, ಉದ್ಯೋಗದಲ್ಲಿನ ಸೋಲು ಮತ್ತು ನೀವು ಸಾಧಿಸಲು ಬಯಸಿದ್ದನ್ನು ಸಾಧಿಸಲು ಸಾಧ್ಯವಾಗದಿರುವುದು,ಈ ಮುಂತಾದವುಗಳು ಆತ್ಮಹತ್ಯೆಗೆ ಕಾರಣವಾಗಿರುತ್ತವೆ. ನಿಮ್ಮ ಪ್ರಜ್ಞೆಯಲ್ಲಿ ಅಥವಾ ನಿಮ್ಮ ಮನಸ್ಸಿನಲ್ಲಿ ಮೂಡುವ ಸಣ್ಣ ಪುಟ್ಟ ಆಸೆಗಳಿಗಿಂತ ಜೀವನವು ಬಹಳಷ್ಟು ಅಮೂಲ್ಯವಾದದ್ದು.

ಆದ್ದರಿಂದ ನಿಮ್ಮ ಜೀವನದ ಸಂರಕ್ಷಣೆಗಾಗಿ ,ಅಗತ್ಯವಿರುವ ವೃತ್ತಿಪರ ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳಿ; ಜೀವನವನ್ನು ವಿಶಾಲವಾದ ದೃಷ್ಟಿಕೋನದಿಂದ ನೋಡಿ ಮತ್ತು ನಿಮ್ಮನ್ನು ಕೆಲವು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.